ಆತ್ಮಹತ್ಯೆಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಎಲ್ಲ ಸಮಾಜಗಳಲ್ಲೂ ಹೆಚ್ಚುತ್ತಿವೆ. ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಈ ಕುರಿತು ಅನೇಕ ಸಂಶೋಧನೆಗಳು ಕೂಡಾ ನಡೆಯುತ್ತಿವೆ. ಇಡೀ ಒಂದು ಸಮಾಜವೇ ಹೆಚ್ಚು ಗಂಭೀರವಾಗಿ ಚಿಂತನೆ ಮಾಡಬೇಕಾದ ಸಂಗತಿಯಿದು ಎಂದು ಅನೇಕ ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು World Health Organization ಪ್ರಕಾರ, 2022ರಲ್ಲಿ ಜಗತ್ತಿನಲ್ಲಿ 7 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದರ 20 ಪಟ್ಟು ಜನರು ಅಂದರೆ ಒಂದು ಕೋಟಿಗೂ ಅಧಿಕ ಜನರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇನ್ನು 2022ರಲ್ಲಿ ಭಾರತದಲ್ಲಿ 1.64 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗಿದ್ದರೆ, ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಆತ್ಮಹತ್ಯೆ ಬಲಿಯಾದವರಲ್ಲಿ ಶೇಕಡಾ 77ರಷ್ಟು ಜನರು ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಕೋವಿಡ್ ನಂತರ ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಗೂಲಿ ನೌಕರರ ಪ್ರಮಾಣವೇ ಶೇಕಡಾ 25.6ರಷ್ಟಿದೆ. ಅಂದರೆ ಭಾರತದಲ್ಲಿ ಆತ್ಮಹತ್ಯೆಗೆ ಬಲಿಯಾಗುತ್ತಿರೋರಲ್ಲಿ ದಿನಗೂಲಿ ನೌಕರರೇ ಹೆಚ್ಚು.
ಇದನ್ನೂ ಓದಿ : ನಿದ್ರೆಯನ್ನ ನಿರ್ಲಕ್ಷ್ಯ ಮಾಡಿದ್ರೆ ಕಾದಿದೆ ಅಪಾಯ..!
ಭಾರತದಲ್ಲಿ ಶ್ರೀಮಂತ ರಾಜ್ಯಗಳೆಂದೇ ಗುರುತಿಸಲ್ಪಡುವ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲೇ ಅತಿಹೆಚ್ಚು ಜನರು ಆತ್ಮಹತ್ಯೆ ಶರಣಾಗಿದ್ರೆ, ನಮ್ಮ ಕರ್ನಾಟಕ 5ನೇ ಸ್ಥಾನದಲ್ಲಿದೆ. ಭಾರತದಲ್ಲಿ ಇಂದು ಪ್ರತಿ 1 ಲಕ್ಷ ಜನರಲ್ಲಿ 12 ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆಗೆ ಶರಣಾದವರಲ್ಲಿ ಪುರುಷರ ಪ್ರಮಾಣ ಶೇಕಡಾ 72.6 ಇದ್ದರೆ ಮಹಿಳೆಯರ ಪ್ರಮಾಣ ಶೇಕಡಾ 27.4ರಷ್ಟಿದೆ. ಅಂದರೆ ಭಾರತದಲ್ಲಿ ಪುರುಷರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮನೋವೈದ್ಯರ ಪ್ರಕಾರ, ಭಾರತದಲ್ಲಾಗುತ್ತಿರುವ ಆತ್ಮಹತ್ಯೆಗಳಿಗೆ ಮೂರು ಪ್ರಮುಖ ಕಾರಣಗಳೆಂದರೆ, ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಅನಾರೋಗ್ಯ ಎನ್ನಲಾಗಿದೆ. ಕೌಟುಂಬಿಕ ಸಮಸ್ಯೆಯ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಜಾಸ್ತಿ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿವೆ. 18ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಆತ್ಮಹತ್ಯೆಯ ಪ್ರಕರಣಗಳಲ್ಲಿ ಬಾಲಕರ ಪ್ರಮಾಣ ಶೇಕಡಾ 47ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇಕಡಾ 53ರಷ್ಟಿದೆ. ಅಂದರೆ 18 ವರ್ಷದೊಳಗಿನ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, ಬೆಂಗಳೂರು, ಮಂಗಳೂರು, ಮೈಸೂರು ಜಿಲ್ಲೆಗಳಲ್ಲೇ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೇ ಅನ್ನೋ ಆಘಾತಕಾರಿ ಅಂಶವೊಂದು ಬಹಿರಂಗವಾಗಿದೆ.
ಇದನ್ನೂ ಓದಿ : ರಸ್ತೆ ಅಪಘಾತಗಳ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ..!

ಒಟ್ಟಾರೆಯಾಗಿ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿಯಾಗಿದ್ದು, ಜನರು ತಮ್ಮ ಮಾನಸಿಕ ಆರೋಗ್ಯದ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ, ಮಾನಸಿಕ ಹೊರೆ ಬೀಳದಂತೆ ಎಚ್ಚರ ವಹಿಸಬೇಕಿದೆ. ಸಮಸ್ಯೆ ಏನೇ ಇದ್ದರು, ಆತ್ಮಹತ್ಯೆಗೆ ಶರಣಾಗುವುದು ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ಆತ್ಮಹತ್ಯೆಯಂತ ಕೆಟ್ಟ ಯೋಚನೆಗಳಿಂದ ದೂರವಿದ್ದು, ಬದುಕಿನಲ್ಲಿ ಎದುರಾಗೋ ಕಷ್ಟಗಳೊಂದಿಗೆ ಹೋರಾಟ ನಡೆಸೋದು ಉತ್ತಮ ಅಲ್ವಾ..?











