ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂತ್ರಾಲಯ ರಾಘಪ್ಪ ಅನ್ನೋ ಮಾತಿದೆ. ಅಂಥಹ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ (Raghavendra Aradhana)ಸಂಭ್ರಮ ಮನೆ ಮಾಡಿದೆ. ರಾಯರು ಸಶರೀರವಾಗಿ ಬೃಂದಾವನಸ್ಥರಾದ ಬಗ್ಗೆಯನ್ನು ಆರಾಧನಾ ಮಹೋತ್ಸವ ಎಂದು ಆಚರಿಸುವುದು ಗೊತ್ತಿರುವ ವಿಚಾರ. ಆದರೆ ಶ್ರೀ ರಾಘವೇಂದ್ರ ಸ್ವಾಮಿಗಳ ಹಿಂದಿನ ಅವತಾರಗಳ ಬಗ್ಗೆ ಗೊತ್ತಿದೆಯೇ? ರಾಯರ ಹಿಂದಿನ ಅವತಾರಗಳ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.
ಗುರು ರಾಘವೇಂದ್ರ ಸ್ವಾಮಿಗಳ ಮೊದಲ ಅವತಾರ ಶಂಕುಕರ್ಣ. ಶಂಕುಕರ್ಣರು ಸತ್ಯಲೋಕದಲ್ಲಿ ಮಹಾ ವಿಷ್ಣುವಿನ ಭಕ್ತರಾಗಿದ್ದವರು. ಬ್ರಹ್ಮದೇವ ಮತ್ತು ಸರಸ್ವತಿಗೆ ವಿಷ್ಣುವಿನ ಪೂಜೆಗೆ ಬೇಕಾಗುವ ಪೂಜಾ ಪದಾರ್ಥಗಳನ್ನು ಅಣಿ ಮಾಡುತ್ತಿದ್ದರು. ಒಮ್ಮೆ ಶಂಕುಕರ್ಣರು ಪವಿತ್ರ ತುಳಸಿ ದಳ ಸಿದ್ಧ ಮಾಡುವುದನ್ನು ಮರೆತುಬಿಡುತ್ತಾರೆ. ಇದರಿಂದ ಬೆಸರಗೊಂಡ ಬ್ರಹ್ಮದೇವನು, ಶಂಕುಕರ್ಣನಿಗೆ ನೀನು ರಾಕ್ಷಸರ ವಂಶದಲ್ಲಿ ಜನಿಸು ಎಂದು ಹೇಳಿಬಿಡುತ್ತಾರೆ. ಇದರಿಂದ ಬೇಸರಗೊಂಡ ವಿಷ್ಣುವಿನ ಪರಮ ಭಕ್ತ ಶಂಕುಕರ್ಣರನ್ನು ಕಂಡು, ರಾಕ್ಷಸರ ನಡುವೆ ಜನಿಸಿದರೂ ನೀನು ಶ್ರೀ ವಿಷ್ಣುವಿನ ಭಕ್ತರಾಗಿಯೇ ಇರುತ್ತೀಯ ಎಂದು ಬ್ರಹ್ಮದೇವ ಹೇಳುತ್ತಾರೆ.
ಬ್ರಹ್ಮದೇವನ ಶಾಪದಂತೆ ಮುಂದಿನ ಜನ್ಮದಲ್ಲಿ ಶಂಕುಕರ್ಣರು ಹಿರಣ್ಯಕಶಿಪುವಿನ ಮಗನಾಗಿ ಜನಿಸುತ್ತಾರೆ. ರಾಯರ ಎರಡನೇ ಅವತಾರವೇ ಪ್ರಹ್ಲಾದ ಮಹಾರಾಜ. ಹರಿಗಿಂತಲೂ ತಾನೇ ದೊಡ್ಡವನು ಎಂಬ ತಂದೆಯ ಮಾತನ್ನು ಒಪ್ಪದ ಪ್ರಹ್ಲಾದರು ಮಹಾವಿಷ್ಣುವಿನ ಪರಮ ಭಕ್ತರಾಗಿರುತ್ತಾರೆ. ಇದರಿಂದ ತಂದೆ ಹಿರಣ್ಯಕಶಿಪು ಉಗ್ರನಾಗಿ ಹೋಗುತ್ತಾನೆ. ಮಗನ ವಿರುದ್ಧವೇ ಕೋಪಗೊಳ್ಳುತ್ತಾನೆ. ಹೀಗಾಗಿ ಮಹಾವಿಷ್ಣು ನರಸಿಂಹ ಅವತಾರವೆತ್ತಬೇಕಾಗುತ್ತದೆ. ವಿಷ್ಣುವಿನ ನರಸಿಂಹ ಅವತಾರಕ್ಕೆ ಪ್ರಹ್ಲಾದರು ಕಾರಣರಾಗುತ್ತಾರೆ.
ಗುರು ರಾಯರ ಮೂರನೇ ಅವತಾರ ಬಾಹ್ಲಿಕ ರಾಜ. ಕೃಷ್ಣನ ಯುಗವಾದ ದ್ವಾಪರ ಯುಗದಲ್ಲಿ ಜನಿಸಿದ ಬಾಹ್ಲಿಕ ರಾಜರು ಕುರುಕ್ಷೇತ್ರ ಯುದ್ಧದಲ್ಲಿಯೂ ಪಾಲ್ಗೊಂಡಿರುತ್ತಾರೆ.
ರಾಘವೇಂದ್ರ ಸ್ವಾಮಿಗಳ ನಾಲ್ಕನೇ ಅವತಾರ ಶ್ರೀ ವ್ಯಾಸರಾಜ ತೀರ್ಥರು. ರಾಯರು ಕಲಿಯುಗದಲ್ಲಿ ಶ್ರೀ ವ್ಯಾಸರಾಜ ತೀರ್ಥರೆಂದು ಜನಿಸಿದರು. ಸುಮಾರು ಕ್ರಿ.ಶ.1480ರಲ್ಲಿ ಮೈಸೂರಿನ ಬಳಿಯ ಬನ್ನೂರಿನಲ್ಲಿ ಶ್ರೀ ವ್ಯಾಸರಾಜ ತೀರ್ಥರು ‘ಯತಿರಾಜ’ರಾಗಿ ಜನಿಸಿದರು. ಶ್ರೀ ವ್ಯಾಸರಾಜ ತೀರ್ಥರು ದೇಶದಾದ್ಯಂತ ಸಂಚಾರ ಮಾಡಿ 732 ಹನುಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಅವುಗಳನ್ನು ಇಂದಿಗೂ ವ್ಯಾಸರಾಜ ಪ್ರತಿಷ್ಠಾಪನಾ ಹನುಮಾನ್ ವಿಗ್ರಹ ಎಂದೇ ಕರೆಯಲಾಗುತ್ತದೆ. ವ್ಯಾಸರಾಜರು ವಿಜಯನಗರ ಅರಸರ ರಾಜ ಗುರುಗಳಾಗಿದ್ದರು. ವಿಜಯನಗರ ಅರಸ ಶ್ರೀ ಕೃಷ್ಣದೇವರಾಯನಿಗೆ ಕುಹುಯೋಗವೆಂಬ ಕೆಟ್ಟ ಯೋಗದ ಕಂಟಕ ಬಂದಾಗ ತಾವೇ ಸಿಂಹಾಸನವೇರಿ ರಾಜ ಕೃಷ್ಣದೇವರಾಯನ ಜೀವ ಉಳಿಸಿದ್ದರು.
ಈ ನಾಲ್ಕು ಅವತಾರಗಳ ನಂತರ ಐದನೇ ಅವತಾರವೇ ಶ್ರೀ ರಾಘವೇಂದ್ರ ಸ್ವಾಮಿಗಳು. ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥರು. ವೆಂಕಟನಾಥರು ತಮ್ಮ ಜನ್ಮದ ಉದ್ದೇಶ ತಿಳಿದ ನಂತರ ಪೂರ್ವಾಶ್ರಮ ತೊರೆದು ಸನ್ಯಾಸಾಶ್ರಮ ಪಡೆಯುತ್ತಾರೆ. ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿ ಈಗಲೂ ತಮ್ಮ ಭಕ್ತನ್ನು ಪೋಷಿಸುತ್ತಿದ್ದಾರೆ ಎಂದು ಸಾಕಷ್ಟು ಜನರು ನಂಬಿದ್ದಾರೆ.
For more articles visit GSS Media










