ಲಕ್ನೋ : ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯಿಂದ ದೇಶದಲ್ಲಿ 50,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ಹೆಚ್ಚಲಿದೆ ಎಂದು ಟ್ರೇಡ್ ಬಾಡಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಹೇಳಿದೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ದಿನವು ಐತಿಹಾಸಿಕವಾಗಿರುತ್ತದೆ. ಏಕೆಂದರೆ ದೇಶಾದ್ಯಂತ ಎಲ್ಲಾ ವರ್ಗಗಳ ಜನರಲ್ಲಿ ಅಪಾರ ಉತ್ಸಾಹವಿದೆ. ಇದರಿಂದ ದೇವಾಲಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗಲಿವೆ. ಈ ಹೆಚ್ಚುವರಿ ವ್ಯಾಪಾರದ ಬೇಡಿಕೆಯನ್ನು ಪೂರೈಸಲು ಎಲ್ಲಾ ರಾಜ್ಯಗಳ ವ್ಯಾಪಾರಿಗಳು, ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸನಾತನ ಧರ್ಮದ ಬೇರುಗಳು ಭಾರತದಲ್ಲಿ ಬಹಳ ಆಳವಾಗಿವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಪ್ರಭು ಶ್ರೀರಾಮನ ಪರಿಪೂರ್ಣ ವ್ಯಕ್ತಿತ್ವದ 16 ಗುಣಗಳು..!
ರಾಮ ಮಂದಿರದ ಉದ್ಘಾಟನೆ ದಿನದಂದು ರಾಷ್ಟ್ರವ್ಯಾಪಿ ಅಪಾರ ವ್ಯಾಪಾರ ಅವಕಾಶಗಳು ಸೃಷ್ಟಿಯಾಗಿವೆ. ವಿಶೇಷ ಬಟ್ಟೆಯ ಹೂಮಾಲೆಗಳು, ಲಾಕೆಟ್ಗಳು, ಕೀ ಚೈನ್ಗಳು, ರಾಮ್ ದರ್ಬಾರ್ನ ಚಿತ್ರಗಳು, ರಾಮಮಂದಿರದ ಮಾದರಿಗಳು, ಶ್ರೀರಾಮ ಧ್ವಜ, ಶ್ರೀರಾಮ ಅಂಗವಸ್ತ್ರ ಇತ್ಯಾದಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷವಾಗಿ ಶ್ರೀರಾಮ ಮಂದಿರದ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ಮಾದರಿಗಳನ್ನು ಹಾರ್ಡ್ಬೋರ್ಡ್, ಪೈನ್ವುಡ್, ಮರ ಇತ್ಯಾದಿಗಳಿಂದ ವಿವಿಧ ಗಾತ್ರಗಳಲ್ಲಿ ತಯಾರಿಸಲಾಗುತ್ತಿದೆ. ಈ ಮಾದರಿಗಳನ್ನು ತಯಾರಿಸುವಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯೋಗ ಪಡೆಯುತ್ತಿದ್ದಾರೆ. ಸ್ಥಳೀಯ ಕುಶಲಕರ್ಮಿಗಳು, ಕಲಾವಿದರು ಮತ್ತು ನುರಿತ ಮತ್ತು ಕೌಶಲ್ಯರಹಿತ ಕೆಲಸಗಾರರು ಎಲ್ಲಾ ರಾಜ್ಯಗಳಲ್ಲಿ ವ್ಯಾಪಾರ ಅವಕಾಶಗಳನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಹೊಸ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ. ಶ್ರೀರಾಮ ಮಂದಿರದ ಮಾದರಿಗಳನ್ನು ಮುದ್ರಿಸಲಾಗಿರುವ ಹೆಚ್ಚಿನ ಸಂಖ್ಯೆಯ ಕುರ್ತಾಗಳು, ಟೀ ಶರ್ಟ್ಗಳು ಮತ್ತು ಇತರ ಬಟ್ಟೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಖಾದಿ ಬಟ್ಟೆಯನ್ನು ಕೈಯಿಂದ ಕಸೂತಿ ಮಾಡಲಾದ ಅಥವಾ ಮುದ್ರಿಸುವ ಕುರ್ತಾಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಇದರಿಂದ ಜವಳಿ ಉದ್ಯಮವು ಪ್ರಗತಿ ಕಾಣುತ್ತಿದೆ.

ಇನ್ನು ಜನವರಿ 22ರಂದು ದೇಶದಲ್ಲಿ ದೀಪಾವಳಿ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಮಣ್ಣಿನ ದೀಪಗಳು, ರಂಗೋಲಿ ಮಾಡಲು ವಿವಿಧ ಬಣ್ಣಗಳು, ಹೂವಿನ ಅಲಂಕಾರಕ್ಕೆ ಹೂವುಗಳು, ದೀಪಾಲಂಕಾರಕ್ಕೆ ಬೇಕಾದ ಎಲೆಕ್ಟ್ರಿಕಲ್ ವಸ್ತುಗಳಿಗೆ ಭಾರಿ ಬೇಡಿಕೆ ಬರಲಿದೆ. ಸೇವಾ ವಲಯವು ಕೂಡಾ ದೊಡ್ಡ ಉತ್ತೇಜನವನ್ನು ಪಡೆಯುವ ಸಾಧ್ಯತೆಯಿದೆ. ಹೋರ್ಡಿಂಗ್ಗಳು, ಪೋಸ್ಟರ್ಗಳು, ಬ್ಯಾನರ್ಗಳು, ಕರಪತ್ರಗಳು, ಸ್ಟಿಕ್ಕರ್ಗಳು ಮುಂತಾದ ಪ್ರಚಾರ ಸಾಮಗ್ರಿಗಳ ತಯಾರಕರು ಸಹ ಗಣನೀಯ ವ್ಯವಹಾರಕ್ಕೆ ಸಾಕ್ಷಿಯಾಗಲಿದ್ದಾರೆ.
ಇನ್ನೊಂದೆಡೆ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯಿಂದ ದೇಶಾದ್ಯಂತ ಸಂಗೀತ ಕ್ಷೇತ್ರಕ್ಕೂ ಅಪಾರ ಬೇಡಿಕೆ ಬಂದಿದೆ. ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ಹಾಡುಗಳನ್ನು ರಚಿಸಲಾಗುತ್ತಿದೆ. ಕಡಿಮೆ ಪ್ರಸಿದ್ಧ ಸಾಹಿತಿಗಳು, ಸಂಯೋಜಕರು ಮತ್ತು ಗಾಯಕರು ಕೆಲಸ ಪಡೆಯುತ್ತಿದ್ದಾರೆ. ಅಲ್ಲದೆ, ಆರ್ಕೆಸ್ಟ್ರಾ ಪಾರ್ಟಿಗಳು ಕೂಡ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿವೆ.

ಒಟ್ಟಾರೆಯಾಗಿ ಶ್ರೀರಾಮ ಮಂದಿರದ ಉದ್ಘಾಟನೆಯಿಂದಾಗಿ ದೇಶಾದ್ಯಂತ ಸುಮಾರು 50,000 ಕೋಟಿ ರೂಪಾಯಿ ವ್ಯಾಪಾರ ನಡೆಯಲಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ದತೆಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ. ಇನ್ನೊಂದೆಡೆ ಉತ್ತರ ಪ್ರದೇಶ ರಾಜ್ಯದ ಪ್ರವಾಸೋಧ್ಯಮ ಮುಂದಿನ ದಿನಗಳಲ್ಲಿ ಗಣನೀಯ ಪ್ರಗತಿ ಸಾಧಿಸಲಿದೆ. ಅಂದಾಜಿನ ಪ್ರಕಾರ, ಪ್ರತಿದಿನ ಅಯೋಧ್ಯೆಗೆ ಸುಮಾರು 5 ಲಕ್ಷ ಭಕ್ತರು ಭೇಟಿ ನೀಡುವ ಸಾಧ್ಯತೆ ಇದ್ದು, ಇದರಿಂದಲೇ ವಾರ್ಷಿಕ 20,000 ಕೋಟಿ ರೂಪಾಯಿ ಆದಾಯವನ್ನು ವಿವಿಧ ಮೂಲಗಳಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ಬರಲಿದೆ ಎಂದು ಅನೇಕ ಹಣಕಾಸು ಸಂಸ್ಥೆಗಳು ಅಂದಾಜಿಸಿವೆ.
ಇದನ್ನೂ ಓದಿ : ಜಗತ್ತಿನ ವಿವಿದೆಡೆಯಿಂದ ಪ್ರಭು ಶ್ರೀರಾಮನಿಗೆ ಉಡುಗೊರೆಗಳ ಮಹಾಪೂರ..!










