ತನ್ನ ದೈವಿಕ ಗುಣಗಳಿಂದಲೇ ಕೋಟ್ಯಾಂತರ ಭಕ್ತರ ಮನದಲ್ಲಿ ನೆಲೆ ನಿಂತಿರುವ ಪ್ರಭು ಶ್ರೀರಾಮ ಎಲ್ಲ ಕಾಲಕ್ಕೂ ಸಲ್ಲುವ ಆದರ್ಶ ಗುಣಗಳ ಅವತಾರ ಪುರುಷ. ಪ್ರಭು ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಪ್ರಭು ಶ್ರೀರಾಮನದು ಪರಿಪೂರ್ಣ ವ್ಯಕ್ತಿತ್ವ. ಜೀವನ ಮೌಲ್ಯಗಳು, ನಡವಳಿಕೆ, ಸಂಬಂಧಗಳು ಹೀಗೆ ನಾವು ಯೋಚಿಸಬಹುದಾದ ಎಲ್ಲ ವಿಷಯದಲ್ಲೂ ಶ್ರೀರಾಮನದು ಪರಿಪೂರ್ಣ ವ್ಯಕ್ತಿತ್ವ. ಮಹರ್ಷಿ ವಾಲ್ಮೀಕಿ ಅವರ ಪ್ರಕಾರ ಶ್ರೀರಾಮನು ಆದರ್ಶ ನಾಯಕನ ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವ ಏಕೈಕ ವ್ಯಕ್ತಿ. ಶ್ರೀರಾಮನನ್ನು ಆದರ್ಶ ಪುರೋಷೋತ್ತಮನನ್ನಾಗಿ ಪರಿವರ್ತಿಸುವ 16 ಉದಾತ್ತ ಗುಣಗಳ ವಿವರ ಇಲ್ಲಿದೆ.
ಇದನ್ನೂ ಓದಿ : ಜಗತ್ತಿನ ವಿವಿದೆಡೆಯಿಂದ ಪ್ರಭು ಶ್ರೀರಾಮನಿಗೆ ಉಡುಗೊರೆಗಳ ಮಹಾಪೂರ..!
ಗುಣ 1 – ಅನಸೂಯಕಹ
ಪ್ರಭು ಶ್ರೀರಾಮನು ತನ್ನ ಭಾವನೆಗಳ ಮೇಲೆ ಬಲವಾದ ನಿಯಂತ್ರಣವನ್ನು ಹೊಂದಿದ್ದನು. ಹೀಗಾಗಿಯೇ ಆತ ಯಾರ ಬಗ್ಗೆಯೂ ಎಂದಿಗೂ ಅಸೂಯೆ ಪಡಲಿಲ್ಲ. ಯಾರ ಬಗ್ಗೆಯೂ ಕೆಟ್ಟದಾಗಿ ಯೋಚಿಸಲಿಲ್ಲ.
ಗುಣ 2 – ಧರ್ಮಜ್ಞ
ಪ್ರಭು ಶ್ರೀರಾಮನು ಯಾವಾಗಲೂ ಧರ್ಮ ಮತ್ತು ಸದಾಚಾರಯುಕ್ತ ಮಾರ್ಗವನ್ನು ಅನುಸರಿಸಿದನು. ಯಾವಾಗಲೂ ತನ್ನ ಜೀವನ ಮೌಲ್ಯಗಳಿಗೆ ಅಂಟಿಕೊಂಡಿದ್ದನು. ಆದರ್ಶ ಮೌಲ್ಯಗಳ ವಿಷಯದಲ್ಲಿ ಪ್ರಭು ಶ್ರೀರಾಮನು ಎಂದಿಗೂ ರಾಜಿಯಾಗಲಿಲ್ಲ.
ಗುಣ 3 – ಆತ್ಮವಾಂಕ
ಪ್ರಭು ಶ್ರೀರಾಮನು ಆತ್ಮದ ಮಹತ್ವವನ್ನು ಚೆನ್ನಾಗಿ ತಿಳಿದಿದ್ದನು. ಆಧ್ಯಾತ್ಮಿಕ ಬುದ್ಧಿವಂತಿಕೆಯು ಅವನ ಹಲವು ಜೀವನಗಾಥೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಗುಣ 4 – ವೀರ್ಯವಾನ್
ವೀರ್ಯವಾನ್ ಎಂದರೆ ಬಲಶಾಲಿ ಎಂದರ್ಥ. ಪ್ರಭು ಶ್ರೀರಾಮನು ಅಸಾಮಾನ್ಯ ಶಕ್ತಿಯನ್ನು ಹೊಂದಿದ್ದನು. ಆದಾಗ್ಯೂ, ಅವನು ಎಂದಿಗೂ ಇವುಗಳನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ ಅಶಕ್ತರ ಮೇಲೆ ತನ್ನ ಶಕ್ತಿಯನ್ನು ಪ್ರಯೋಗಿಸಲಿಲ್ಲ.
ಗುಣ 5 – ಕೃತಜ್ಞ
ರಾವಣನನ್ನು ಸೋಲಿಸಿದ ನಂತರ, ಪ್ರಭು ಶ್ರೀರಾಮನು ವಾನರರ ಸಹಾಯಕ್ಕಾಗಿ ಮನಃಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದನು. ನಿಸ್ವಾರ್ಥ ಸೇವೆಗಾಗಿ ಹನುಮಂತನಿಗೆ ಋಣಿಯಾಗಿದ್ದನು. ತನಗೆ ಸಹಾಯ ಮಾಡಿದವರ ಬಗ್ಗೆ ಪ್ರಭು ಶ್ರೀರಾಮನು ಸದಾ ಕೃತಜ್ಞನಾಗಿದ್ದನು.
ಗುಣ 6 – ಸತ್ಯವಾಕ್ಯಃ ಪರಿಪಾಲಕ
ಪ್ರಭು ಶ್ರೀರಾಮನು ಯಾವಾಗಲೂ ಸತ್ಯವನ್ನೇ ಹೇಳಿದನು. ಪ್ರಾಮಾಣಿಕತೆಯು ನಾಯಕನನ್ನು ಅಧಿಕೃತವಾಗಿಸುತ್ತದೆ ಮತ್ತು ನಂಬಿಕೆಯನ್ನು ನಿರ್ಮಿಸುತ್ತದೆ ಎಂದು ಪ್ರಭು ಶ್ರೀರಾಮನು ನಂಬಿದ್ದನು.

ಗುಣ 7 – ವರ್ಚಸ್ವಿ
ಪ್ರಭು ಶ್ರೀರಾಮನು ಯಾವುದೇ ಕಳಂಕವಿಲ್ಲದ ವ್ಯಕ್ತಿಯಾಗಿದ್ದನು. ರಾಮನ ನಾಯಕತ್ವದಲ್ಲಿ ಆತ್ಮವಿಶ್ವಾಸ, ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವು ಉತ್ತಮವಾಗಿತ್ತು. ಶ್ರೀರಾಮನು ಆದರ್ಶ ನಾಯಕನಿಗೆ ಪರಿಪೂರ್ಣ ಉದಾಹರಣೆಯಾಗಿದ್ದಾನೆ.
ಗುಣ 8 – ಕೌಶಲ್ಯಪೂರ್ಣ
ಪ್ರಭು ಶ್ರೀರಾಮನಿಗೆ ಅನೇಕ ವಿಷಯಗಳ ಮೇಲೆ ಪಾಂಡಿತ್ಯವಿತ್ತು. ಅವನು ಅಸ್ತ್ರಗಳು ಮತ್ತು ಶಾಸ್ತ್ರ – ವೇದಗಳಲ್ಲಿ ಪಾರಂಗತನಾಗಿದ್ದನು.
ಗುಣ 9 – ಸರ್ವಭೂತೇಷು ಹಿತ
ಪ್ರಭು ಶ್ರೀರಾಮನು ರಾಜನಾಗಿದ್ದರೂ ಜಟಾಯುವಿನ ಅಂತಿಮ ವಿಧಿಗಳನ್ನು ನೆರವೇರಿಸಿದವನು. ಒಂದು ಕಲ್ಲನ್ನು ಕನ್ಯೆಯಾಗಿ ಮಾರ್ಪಡಿಸಿದನು. ಅಹಲ್ಯಾಳನ್ನು ಶಾಪದಿಂದ ಮುಕ್ತಗೊಳಿಸಿದನು. ಪ್ರಭು ಶ್ರೀರಾಮನು ತನ್ನ ಆಳ್ವಿಕೆಯಲ್ಲಿ ಧರ್ಮವನ್ನು ಸ್ಥಾಪಿಸಿದನು. ಹೀಗಾಗಿಯೇ ಅವನ ಆಳ್ವಿಕೆಯು ಜಗತ್ತಿಗೆ ರಾಮ-ರಾಜ್ಯ ಎಂದು ಹೆಸರಾಯಿತು.
ಗುಣ 10 – ದೃಢ
ಪ್ರಭು ಶ್ರೀರಾಮನು ಸತ್ಯ ಮತ್ತು ಸದಾಚಾರದ ಧೋರಣೆಯಲ್ಲಿ ದೃಢನಿಶ್ಚಯ ಹೊಂದಿರುವ ವ್ಯಕ್ತಿಯಾಗಿದ್ದನು. ಶ್ರೀರಾಮನು ವನವಾಸದಲ್ಲಿ ಇರಲು ಸಂತೋಷದಿಂದ ಒಪ್ಪಿಕೊಂಡನು. ಭರತನು ಅಯೋಧ್ಯೆಗೆ ಹಿಂತಿರುಗಲು ಮತ್ತು ರಾಜ್ಯವನ್ನು ವಹಿಸಿಕೊಳ್ಳುವಂತೆ ವಿನಂತಿಸಲು ಬಂದಾಗಲೂ ಅದನ್ನು ಶ್ರೀರಾಮನು ನಿರಾಕರಿಸಿದನು. ಅವನದು ದೃಢವಾದ ನಿರ್ಧಾರವಾಗಿರುತ್ತಿತ್ತು.
ಗುಣ 11 – ದ್ಯುತಿಮಾನ್
ಪ್ರಭು ಶ್ರೀರಾಮನ ಮುಖಭಾವದಲ್ಲಿ ಎಂಥ ತೇಜಸ್ಸು ಇತ್ತೆಂದರೆ ಹನುಮಂತನು ಪ್ರಭು ಶ್ರೀರಾಮನನ್ನು ನೋಡಿದ ತಕ್ಷಣ, ಅವನ ಕಣ್ಣುಗಳಿಂದ ಸಂತೋಷ ಮತ್ತು ಪ್ರೀತಿಯ ಕಣ್ಣೀರು ಹರಿಯಲಾರಂಭಿಸಿತು.

ಗುಣ 12 – ಸಮರ್ಥ
ಪ್ರಭು ಶ್ರೀರಾಮನನ್ನು ಈ ಜಗತ್ತಿನಲ್ಲಿ ಎಲ್ಲವನ್ನೂ ಮಾಡಲು ಸಮರ್ಥನೆಂದು ಪರಿಗಣಿಸಲಾಗಿದೆ. ನಾಯಕನಿಗೆ ಪರಿಹಾರಗಳನ್ನು ಸಾಧಿಸಲು ಬಲವಾದ ಇಚ್ಛಾಶಕ್ತಿ ಇರಬೇಕು. ಹೊಸ ಮತ್ತು ಸೃಜನಾತ್ಮಕ ಆಲೋಚನೆಗಳ ಸಾಮರ್ಥ್ಯವನ್ನು ಹೊಂದಿರುವುದು ರಾಮನಿಂದ ಪ್ರತಿಯೊಬ್ಬರೂ ಕಲಿಯಬಹುದಾದ ನಾಯಕತ್ವದ ಲಕ್ಷಣವಾಗಿದೆ.
ಗುಣ 13 – ಸೌಶೀಲ್ಯಮ್
ಪ್ರಭು ಶ್ರೀರಾಮನು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದನು. ಗುಹ ಮತ್ತು ವಾನರ ರಾಜ ಸುಗ್ರೀವನನ್ನು ತನ್ನ ಸಹೋದರರನ್ನಾಗಿ ಸ್ವೀಕರಿಸಿದನು. ರಾವಣನ ಸಹೋದರ ವಿಭೀಷಣನನ್ನು ಮಿತ್ರನನ್ನಾಗಿ ಒಪ್ಪಿಕೊಂಡನು. ಹೀಗೆ ಸ್ನೇಹ ಅರಸಿ ಬಂದವರಿಗೆ ಪ್ರಭು ಶ್ರೀರಾಮನು ಸೌಶೀಲ್ಯಮ್ ಆಗಿದ್ದನು.
ಗುಣ 14 – ಪ್ರಿಯದರ್ಶನಃ
ಪ್ರಭು ಶ್ರೀರಾಮನನ್ನು ಆಜಾನು ಬಾಹು ಮತ್ತು ಅರವಿಂದ ಲೋಚನ ಎಂದು ವಿವರಿಸಲಾಗಿದೆ, ಅಂದರೆ ಎತ್ತರದ ನಿಲುವಿನ ಸುಂದರಾಂಗ. ನೀವು ಅವನನ್ನು ನೋಡಿದಾಗ, ನೀವು ಮೈಮರೆಯುವಂಥ ಚೆಲುವು ಆತನದಾಗಿತ್ತು.

ಗುಣ 15 – ಜಿತಕ್ರೋದಹ: ಶಾಂತ
ರಾವಣನು ಶಿವನ ಪರಮ ಭಕ್ತರಾಗಿದ್ದನು. ಶಿವನು ತನ್ನ ಆತ್ಮಲಿಂಗವನ್ನೇ ರಾವಣನಿಗೆ ನೀಡಿದ್ದನು. ಹಾಗಿದ್ದೂ, ರಾವಣನನ್ನು ದ್ವೇಷಿಸಲಾಗುತ್ತದೆ ಮತ್ತು ರಾಮನನ್ನು ಪೂಜಿಸಲಾಗುತ್ತದೆ. ಇದಕ್ಕೆ ಕಾರಣ ಪ್ರಭು ಶ್ರೀರಾಮನಲ್ಲಿದ್ದ ಉಗ್ರ ಸನ್ನಿವೇಶಗಳಲ್ಲಿಯೂ ಶಾಂತವಾಗಿ ಉಳಿಯುವ ಸಾಮರ್ಥ್ಯ. ಕೋಪವನ್ನು ಒಳಗೊಂಡಂತೆ ತನ್ನ ಭಾವನೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪ್ರಭು ಶ್ರೀರಾಮನು ಹೊಂದಿದ್ದನು.
ಗುಣ 16 – ಬಿಬ್ಯತಿ ದೇವಾ
ಯುದ್ಧದ ಸಮಯದಲ್ಲಿಯೂ ಪ್ರಭು ಶ್ರೀರಾಮನು ತಾಳ್ಮೆಯಿಂದಿದ್ದನು, ಕೋಪದಿಂದ ದೂರವಿದ್ದನು. ಪ್ರಭು ಶ್ರೀರಾಮನು ತನ್ನನ್ನು ನಿಂದಿಸಿದಾಗ ಎಂದಿಗೂ ಕೋಪಗೊಳ್ಳಲಿಲ್ಲ, ಆದರೆ ಅವನು ತನ್ನ ಭಕ್ತನಿಗೆ ನೋವಾಗುವುದನ್ನು ಎಂದಿಗೂ ಸಹಿಸಲಿಲ್ಲ.
ಇದನ್ನೂ ಓದಿ : ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ವಿಶೇಷತೆಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ










