ಪ್ರತಿದಿನ ನಮ್ಮ ಓಡಾಟಗಳಲ್ಲಿ ನಮ್ಮ ಪಾದಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಪಾದಗಳ ಕಾಳಜಿ ಅನ್ನೋ ವಿಷಯ ಬಂದಾಗ ನಾವು ಅಷ್ಟಾಗಿ ಅವುಗಳನ್ನ ಕೇರ್ ಮಾಡೋದಕ್ಕೆ ಹೋಗಲ್ಲ. ಇದ್ರಿಂದ ಪಾದಗಳಲ್ಲಿ ಸಮಸ್ಯೆಗಳು ಕಾಡುತ್ತವೆ. ಪಾದದ ಚರ್ಮದಲ್ಲಿ ಅದರಲ್ಲೂ ಬೆರಳುಗಳ ಮಧ್ಯದಲ್ಲಿ ಸೋಂಕಿನಿಂದಾಗುವ ಸಮಸ್ಯೆಗಳಾಗುತ್ತವೆ. ಹೀಗೆ ಕೆಲವು ಸಮಸ್ಯೆಗಳು ನಮ್ಮ ಪಾದಗಳಲ್ಲಿ ಸಂಭವಿಸಬಹುದು. ಅದರಲ್ಲಿ ಪಾದಗಳು ಒಡೆಯುವುದೂ ಒಂದು. ಪೌಷ್ಟಿಕಾಂಶದ ಕೊರತೆ ಇದ್ದವರಲ್ಲಿ, ದೇಹದ ಒಣ ಪ್ರಕೃತಿ ಇರುವವರಿಗೆ ಪಾದಗಳಲ್ಲಿ ಬಿರುಕು ಬಿಡುತ್ತದೆ, ಹಿಮ್ಮಡಿ ಒಡೆಯುತ್ತದೆ(Cracked Heels).
ಇಂಥಹ ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಸುಲಭವಾದ ಮದ್ದು ಎಂದರೇ, ರಾತ್ರಿ ಮಲಗುವ ಮುನ್ನ ಬಿಸಿ ನೀರಿನಲ್ಲಿ ಪಾದಗಳನ್ನು ತೊಳೆದು, ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಸ್ವಲ್ಪ ಬೆಚ್ಚಗೆ ಮಾಡಿ ಅದನ್ನು ಪಾದಗಳಿಗೆ ಹಚ್ಚಿಕೊಂಡು ನಂತರ ಸಾಕ್ಸ್ ಹಾಕಿಕೊಂಡು ಮಲಗಬೇಕು. ಪಾದಗಳು ಬೆವರುವಂತೆ ನೋಡಿಕೊಳ್ಳಬೇಕು. ಇದರಿಂದ ಪಾದಗಳು ಒಡೆಯುವುದು ನಿಯಂತ್ರಿಸುತ್ತೆ. ಹಾಗೆ ಬೆಳಗ್ಗೆ ಎದ್ದ ತಕ್ಷಣ ತುಪ್ಪ ಸೇವಿಸುವುದರಿಂದಲೂ ಹಿಮ್ಮಡಿ ಬಿರುಕು ( Cracked Heels) ಬಿಡುವುದು ಕಮ್ಮಿಯಾಗುತ್ತೆ.
ಬೆಳಗ್ಗೆ ಸ್ನಾನಕ್ಕೆ ಹೋಗುವ ಮುನ್ನ ಪಾದಗಳಿಗೆ ಎಣ್ಣೆ ಮಸಾಜ್ ಮಾಡಿಕೊಳ್ಳುವುದು, ಬಿಸಿ ನೀರಿಗೆ ಉಪ್ಪಾಗಿ ಪಾದಗಳನ್ನು ಸ್ವಲ್ಪ ಸಮಯ ಅದರಲ್ಲಿ ಇಟ್ಟುಕೊಳ್ಳುವುದರಿಂದಲೂ ಪಾದಗಳನ್ನು ಕಾಳಜಿ ಮಾಡಿದಂತಾಗುತ್ತದೆ. ಈ ರೀತಿ ಪ್ರತಿದಿನ ಪಾದಗಳಿಗೆ ಎಣ್ಣೆ ಹಚ್ಚಿ, ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಇಡುವುದರಿಂದ ಸಂಪೂರ್ಣ ದೇಹದ ಆಯಾಸ ಕಮ್ಮಿಯಾಗುತ್ತದೆ. ಒಳ್ಳೆ ನಿದ್ರೆ ಕೂಡ ಬರುತ್ತದೆ. ಪಾದಗಳಿಗೆ ಎಣ್ಣೆ ಹಚ್ಚುವುದುರಿಂದ ಕಣ್ಣಿನ ದೃಷ್ಟಿ ಶಕ್ತಿಯೂ ಸುಧಾರಿಸುತ್ತದೆ. ಹೆಚ್ಚಿನ ಕಾಲ ನಿಂತು ಕೆಲಸ ಮಾಡುವವರು ಇದನ್ನೆಲ್ಲಾ ಪಾಲಿಸಿದರೆ ಉತ್ತಮ.
ದೇಹದ ಉಷ್ಣತೆ ಜಾಸ್ತಿಯಾದಾಗ ಪಾದಗಳು ಹೆಚ್ಚು ಉರಿಯುತ್ತವೆ. ಅಂಥವರು ನೆಲ್ಲಿಕಾಯಿ ಪಾನಕ, ದನಿಯಾ ಕಷಾಯ, ದ್ರಾಕ್ಷಿ ಕಷಾಯ ಕುಡಿದರೆ ಉರಿ ಕಮ್ಮಿಯಾಗುತ್ತದೆ. ಒಂದು ವೇಳೆ ಉರಿ ಕಮ್ಮಿಯಾಗಿಲ್ಲ ಎಂದರೆ ವೈದ್ಯರ ಬಳಿ ಪರೀಕ್ಷಿಸುವುದು ಉತ್ತಮ. ಏಕೆಂದರೆ ಪಾದಗಳಲ್ಲಿ ಕಾಡುವ ಕೆಲವು ಸಮಸ್ಯೆಗಳು ದೇಹದ ಬೇರೆ ಸಮಸ್ಯೆಗಳನ್ನು ಸೂಚಿಸುತ್ತಿರುತ್ತವೆ. ಪಾದಗಳಲ್ಲಿ ಸ್ಪರ್ಶ ಜ್ಞಾನ ಗೊತ್ತಾಗದೇ ಇರುವುದು ಅಥವಾ ಪಾದಗಳಲ್ಲಿ ಚುಚ್ಚಿದಂತಹ ಅನುಭವವಾಗುವುದು ಮಧುಮೇಹದ ಸೂಚನೆ ಇರಬಹುದು. ಮಧುಮೇಹ ಇರುವವರು ತಮ್ಮ ಮುಖಗಳಿಗಿಂತಲೂ ಪಾದಗಳನ್ನು ಹೆಚ್ಚಾಗಿ ಕಾಳಜಿ ಮಾಡಬೇಕು.
For more articles visit GSS Media
ಇನ್ನು ಪಾದಗಳು ಒಡೆಯುವುದು ಕೂಡ ಕೆಲವೊಮ್ಮೆ ಬೇರೆ ರೋಗಗಳ ಸೂಚನೆಯಾಗಿರುತ್ತದೆ. ಸೋರಿಯಾಸಿಸ್ ಇದ್ದವರಲ್ಲಿ ಇಂಥ ಸಮಸ್ಯೆಗಳು ಕಾಡುತ್ತವೆ. ಹಾಗೆ ಪಾದದ ಚರ್ಮದ ಬಣ್ಣ ಬದಲಾವಣೆ ಕೂಡ ಕೆಲವು ಸಮಸ್ಯೆಗಳನ್ನು ತೋರಿಸುತ್ತಿರುತ್ತವೆ. ಪಾದದ ಚರ್ಮದ ಬಣ್ಣ ಕಪ್ಪಾಗಿದ್ದರೆ ರಕ್ತನಾಳದಲ್ಲಿ ತೊಂದರೆ ಇರೋದನ್ನ ಅದು ಸೂಚಿಸುತ್ತದೆ. ಹೀಗೆ ಪಾದಗಳ ಕೆಲವು ಸಾಮಾನ್ಯ ಸಮಸ್ಯೆಗೆ ಮನೆಯಲ್ಲೇ ಕೇರ್ ಮಾಡಿಕೊಂಡು ಪರಿಹಾರ ಮಾಡಿಕೊಳ್ಳಬಹುದಾದರೂ ಅವುಗಳು ಪರಿಹಾರವಾಗಿಲ್ಲವೆಂದು ಗೊತ್ತಾದರೆ ತಕ್ಷಣ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು ಸಮಸ್ಯೆ ಬಗ್ಗೆ ತಿಳಿದು ಔಷಧ ತೆಗೆದುಕೊಳ್ಳುವುದು ಉತ್ತಮ.
ಪಾದಗಳ ಆರೋಗ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಎಸ್ಎಸ್ ಮಾಧ್ಯಮದಲ್ಲಿ ಪ್ರಸಾರವಾದ ಈ ಎಪಿಸೋಡ್ಗಳನ್ನು ವೀಕ್ಷಿಸಿ;










